ವೇದಸದೃಶವಾದ ಮಧ್ವಶಾಸ್ತ್ರದ ರಸಋಷಿಗಳು ಶ್ರೀ ಜಯತೀರ್ಥರು(1365-1388)
"ಮೇಘನಾಥಪುರ ಕಕುರ ವೇಣಿದಾಸ
ರಾಘವೇಶ ವಿಜಯವಿಠ್ಠಲನ್ನ ನಿಜದಾಸ"
ಶ್ರೀ ಟೀಕಾಚಾರ್ಯರು
ಶ್ರೀಮದಾಚಾರ್ಯರ ಒಂದೊಂದು ಗ್ರಂಥರತ್ನಗಳ ಬೆಲೆಯನ್ನು ಲೋಕಕ್ಕೆ ತಿಳಿಯುವಂತೆ ಮಾಡುದ ಯಶಸ್ಸು ಶ್ರೀಟೀಕಾಕೃತ್ಪಾದರಿಗೆ ಸಲ್ಲುತ್ತದೆ. ಇಂತಹ ಮಹಾತ್ಮರ ಪುಣ್ಯದಿನ ಆಷಾಢದಲ್ಲಿ. ಇವರ ಪಾದಸ್ಮರಣೆಯನ್ನು ಮಾಡುವ ದಿನವೇ ನಮ್ಮೆಲ್ಲರ ಸುದಿನವು. ಶ್ರೀ ಜಯತೀರ್ಥರನ್ನು ಮಹಾತ್ಮರನ್ನು ಮಹಾತ್ಮರೊಬ್ಬರ ವೀರನೆಂದು ವರ್ಣಿಸಿದ್ದಾರೆ.
"ಯೇನಗಾಹಿ ಸಮಸ್ತ ಶಾಸ್ತ್ರಪೃತನಾರತ್ನಾಕರೋ ಲೀಲಯಾ
ಯೇನಾಖಂಡಿ ಕುವಾದಿಸರ್ವಸುಭಟಸ್ತೋಮೋ ವಚಸ್ಸಾಯಕೈಃ |
ಯೇನಾಸ್ಥಾಪಿ ಚ ಮಧ್ವಶಾಸ್ತ್ರವಿಜಯಸ್ತಂಭೋ ಧರಾಮಂಡಲೇ
ತಂ ಸೇವೇ ಜಯತೀರ್ಥವೀರಮನಿಶಂ ಮಧ್ವಾಖ್ಯ ರಾಜಾದೃತಂ ||
ಮಧ್ವಶಾಸ್ತ್ರಗಳೆಂಬ ಸೈನ್ಯರತ್ನಾಕರವನ್ನು ಲೀಲೆಯಿಂದ ಪ್ರವೇಶಿಸಿದ ವೀರರಿವರು. ತಮ್ಮ ವಾಗ್ಬಾಣಗಳಿಂದ ಕುವಾದಿಭಟಸಮೂಹವನ್ನು ನಾಶಗೊಳಿಸಿದ ವೀರರಿವರು. ಮಧ್ವಶಾಸ್ತ್ರದ ವಿಜಯಸ್ತಂಭವನ್ನು ಭೂಮಿಯಲ್ಲಿ ಸ್ಥಾಪಿಸಿದ ವೀರರಿವರು. ದ್ವೈತಸಾಮ್ರಾಜ್ಯಚಕ್ರವರ್ತಿಗಳಾದ ಮಧ್ವರಾಜರಿಂದ ಆದೃತರಾದ ವೀರರಿವರು. ಇವರು ಸಾಕ್ಷಾತ್ ಇಂದ್ರಾವತರಿಗಳು. ಇದನ್ನರಿತ ಮತ್ತೊಬ್ಬ ಮಹಾತ್ಮರು ಇಂದ್ರಾವತಾರಿಯಾದ ಅರ್ಜುನನೇ ಈ ಯತಿಯೋಗಿಯೆಂದು ಸ್ತ್ರೋತ್ರಗೈದಿದ್ದಾರೆ.
ಸತ್ಸೂತ್ರಾನ್ವಿತಮಧ್ವಭಾಷ್ಯವಿಲಸದ್ಗಾಂಡೀವಸಂಯೋಜಿತೈಃ
ಸನ್ಮಾನೇಷುಭಿರರ್ದಯನ್ಕುಸಮಯಪ್ರತ್ಯರ್ಥಿದುಃಸ್ಯಂದನಾನ್
ಶ್ರೀಕೃಷ್ಣೇರಿತವಾದವಾಜಿನಿಯತಶ್ರೀಮಧ್ವಶಾಸ್ತ್ರೋಲ್ಲಸ
ದ್ದಿವ್ಯಸ್ಯಂದನಸಂಸ್ಥಿತೋ ಜಯಮುನಿಶಾಖ್ಯಾರ್ಜುನಃ ಸ್ಯಾನ್ಮುದೇ....
ಮಹಾಮಹಿಮರಾದ ಶ್ರೀ ಜಯತೀರ್ಥರು ಮಂಗಳವೇಡೆಯ ದೇಶಪಾಂಡೆಯವರ ಕೂಸಾಗಿ ಜನಿಸಿ ಅವರ ಕುಲವನ್ನು ಪವಿತ್ರಗೊಳಿಸಿದರು. ಶ್ರೀಮಂತರ ಕುಲದಲ್ಲಿ ಸುಖವಾಗಿ ಬೆಳೆದು ಪ್ರಾಪ್ತ ವಯಸ್ಕರಾದರು. ಇವರ ಪೂರ್ವಾಶ್ರಮದ ಹೆಸರು ಧೋಂಡೋರಾಯರೆಂದು. ಒಮ್ಮೆ ತಮ್ಮ ಸ್ನೇಹಿತರೊಡನೆ ಕುದುರೆ ಸವಾರಿಗಾಗಿ ಕಾಡಿಗೆ ಹೋದರು. ನೀರಡಿಕೆಯಾಯಿತೆಂದು ಭೀಮಾನದಿಗೆ ಬಂದರು. ಅಲ್ಲಿ ಕುದುರೆಯನ್ನು ನೀರಿನಲ್ಲಿಯೇ ನಿಲ್ಲಿಸಿ ಕುದುರೆ ಮೇಲೆಯೇ ಕುಳಿತು ಪ್ರವಾಹದ ನೀರಿಗೆ ಬಾಯಿಹಚ್ಚಿ ನೀರನ್ನು ಕುಡಿದರು. ಆಗ ನದಿಯ ತೀರದಲ್ಲಿ ತಪಸ್ಸುಗೈಯ್ಯುತ್ತಲಿದ್ದ ಸನ್ಯಾಸಿಯೋರ್ವರು ಈ ಯುವಕನನ್ನು ಕುರಿತು "ಕಿಂ ಪಶುಃ ಪೂರ್ವದೇಹೇ?" ಅಂದರೆ ಪೂರ್ವಜನ್ಮದಲ್ಲಿ ಇವನು ಪಶುವಾಗಿದ್ದನೋ? ಎಂದ ಈ ಸನ್ಯಾಸಿಗಳೇ ಇವರ ಗುರುಗಳಾದ "ಶ್ರೀ ಅಕ್ಷೋಭ್ಯತೀರ್ಥರು". ಗುರುಗಳ ಈ ಮಾತಿನಿಂದ ಪೂರ್ವಜನ್ಮ ಸ್ನರಣೆಯೂ, ಇಹ ಜನ್ಮದ ಗುರಿಯೂ ಇವರಿಗೆ ಹೊಳೆಯಿತು. ಒಡನೆಯೇ ತಮ್ಮ ಸರ್ವ ಐಶ್ವರ್ಯವನ್ನು ರೂಪವತಿಯಾದ ಮಡದಿಯನ್ನು ತ್ಯಜಿಸಿ, ಸನ್ಯಾಸವನ್ನು ದಯಪಾಲಿಸುವಂತೆ ಅಕ್ಷೋಭ್ಯತೀರ್ಥರನ್ನು ಪ್ರಾರ್ಥಿಸಿದರು. (ಜಯತೀರ್ಥರು ಹಿಂದಿನ ಜನ್ಮದಲ್ಲಿ ಪಶುವಾಗಿದ್ದು, ಮಾಧ್ವ ಗ್ರಂಥಗಳನ್ನು ಹೊತ್ತು , ಶ್ರೀಆಚಾರ್ಯ ಮುಖದಿಂದಲೇ ಪಾಠ ಕೇಳಿ ತಿಳಿದರೆಂದು ಐತಿಹ್ಯವಿದೆ) .
ದೇವಾಂಶರೂ, ಸ್ವಯಂಸ್ಫೂರ್ತಿವಂತರೂ, ಜ್ಞಾನಿಗಳೂ ಆದ ಇವರು ಸನ್ಯಾಸ ಸ್ವೀಕರಿಸಿದ ನಂತರ ಆಚಾರ್ಯರ ಸೇವಾರೂಪವಾದ, ಅವರ ಗ್ರಂಥಗಳಿಗೆ ವ್ಯಾಖ್ಯಾನ ಬರೆಯುವದನ್ನೂ, ಪರವಾದಿಜಯವನ್ನೂ ಪ್ರಾರಂಭಿಸಿದರು. ಅರ್ಜುನನಿಂದ ದ್ರೋಣರು ಪ್ರಖ್ಯಾತರಾದಂತೆ ಇವರಿಂದ ಅಕ್ಷೋಭ್ಯತೀರ್ಥ ಮುನಿಗಳ ಯಶಸ್ಸು ಹೆಚ್ಚಿಗೆ ಹರಡಿತು. ಶ್ರೀಜಯತೀರ್ಥರಿಗೆ ಶ್ರೀದುರ್ಗೆಯು ಒಲಿದು ಒಂದು ಕಂಚಿನ ಲೆಕ್ಕಣಿಕೆಯನ್ನು ಒಂದು ಅಡಕೆಯನ್ನು ಇತ್ತಳಂತೆ. ಎರಗೊಳ ಎಂಬ ಗ್ರಾಮದ ಸಮೀಪದಲ್ಲಿ ಗುಹೆಯೊಂದರಲ್ಲಿ ವಾಸಿಸುತ್ತಾ ಗ್ರಂಥರಚನೆ ಮಾಡಿದುದು. ಗ್ರಂಥ ರಚನೆ ಮಾಡುತ್ತಲಿದ್ದಾಗ ಆ ಕಾಲದ ಪ್ರಸಿದ್ಧ ವಿದ್ವಾಂಸರೆನಿಸಿದ ವಿದ್ಯಾರಣ್ಯರು ಇವರ ಭೇಟಿಗಾಗಿ ಇವರಿದ್ದಲ್ಲಿಗೆ ಬಂದರು. ಆಗ ಇವರು ಶ್ರೀಮದಾಚಾರ್ಯರ "ಪ್ರಮಾಣಲಕ್ಷಣ" ಎಂಬ ಗ್ರಂಥಕ್ಕೆ ವ್ಯಾಖ್ಯಾನ ರಚಿಸುತ್ತಲಿದ್ದರಂತೆ. ಪ್ರಮಾಣಲಕ್ಷಣಗ್ರಂಥವನ್ನು ಮಹಾ ವಿದ್ವಾಂಸರಾದ ವಿದ್ಯಾರಣ್ಯರ ಕೈಗಿತ್ತರಂತೆ. ಅದನ್ನು ನೋಡಿ ಅರ್ಥವಾಗದ ವಿದ್ಯಾರಣ್ಯರು "ಬಾಲವಾಕ್ಯೇನ ಕಿಂ ಮೇ" ಎಂದರಂತೆ. ಶ್ರೀಜಯತೀರ್ಥರು ಆಚಾರ್ಯರ ವ್ಯಾಕ್ಯಕ್ಕೆ ರಚಿಸಿದ ವ್ಯಾಖ್ಯಾನವನ್ನು ಓದಿ ಬೆಕ್ಕಸಬೆರಗಾದ ವಿದ್ಯಾರಣ್ಯರು ಆಚಾರ್ಯರ ವಾಕ್ಯದ ಗಾಂಭೀರ್ಯವನ್ನೂ ಜಯತೀರ್ಥರ ಪ್ರತಿಭೆ ಪಾಂಡಿತ್ಯವನ್ನು ಅರಿತು ಶ್ರೀ ಜಯತೀರ್ಥರನ್ನೂ, ಅವರ ಗ್ರಂಥಗಳನ್ನೂ ಸನ್ಮಾಸಿದರು.
ಶ್ರೀಜಯತೀರ್ಥರ ಗ್ರಂಥರಚನೆ
ಶ್ರೀ ಜಯತೀರ್ಥರು ಹದಿನೆಂಟು ಗ್ರಂಥಗಳನ್ನೂ, ಮೂರು ಸ್ವತಂತ್ರ ಗ್ರಂಥಗಳನ್ನೂ ರಚಿಸಿದ್ದಾರೆ. ಪ್ರಮಾಣ ಪದ್ಧತಿ, ವಾದಾವಳಿ, ಪದ್ಯಮಾಲಾ ಇವುಗಳು ಇವರ ಸ್ವತಂತ್ರ ಗ್ರಂಥಗಳು. ಆಚಾರ್ಯರ ದಶ ಪ್ರಕರಣಗಳಿಗೂ ಇವರು ವ್ಯಾಖ್ಯಾನ ರಚಿಸಿದ್ದಾರೆ. ಬ್ರಹ್ಮಸೂತ್ರಭಾಷ್ಯಕ್ಕೆ ಇವರು ಬರೆದ ಟೀಕಾಗ್ರಂಥವು "ತತ್ವಪ್ರಕಾಶಿಕಾ" ಎಂದೂ, ಇವರು ರಚಿಸಿದ ಗೀತಾಭಾಷ್ಯ ಟೀಕೆಯು ಪ್ರಮೇಯದೀಪಿಕೆ ಎಂದೂ, ಗೀತಾತಾತ್ಪರ್ಯ ವ್ಯಾಖ್ಯಾನವು ನ್ಯಾಯದೀಪಿಕೆ ಎಂದೂ ಪ್ರಸಿದ್ಧವಾಗಿದೆ. ಶ್ರೀಜಯತೀರ್ಥರ ಶಿಷ್ಯೋತ್ತಮರಲ್ಲೊಬ್ಬರಾದ ಶ್ರೀತ್ರಿವಿಕ್ರಮ ಪಂಡಿತರು "ಹೇ ಸ್ವಾಮಿನ್ ತಾವು ರಚಿಸಿದ ಅಗಾಧಗ್ರಂಥರತ್ನಾಕರದಿಂದ ತಮ್ಮ ಯುಕ್ತಿರತ್ನಗಳನ್ನು ಆರಿಸಿ ಹೊರಕ್ಕೆ ತೆಗೆಯುವದು ಅಲ್ಪ ಮತಿಗಳಾದ ನಮಗ ಬಹುಕಷ್ಟವಾದುದರಿಂದ ಯುಕ್ತಿಸಮೂಹದಿಂದ ಕೂಡಿದ ಪ್ರತ್ಯೇಕ ಗ್ರಂಥವನ್ನು ರಚಿಸಿ ಉದ್ಧರಿಸಬೇಕೆಂದು" ಪ್ರಾರ್ಥಿಸಿದರು.
"ಇತ್ಯರ್ಥಿತೋ ವ್ಯಧಾನ್ಮಧ್ವಃ ಸೋನುವ್ಯಾಖ್ಯಾಂ ಸತಾಂ ಸುಧಾಂ
ದುರ್ವಾದಿಗರ್ವಾದ್ರಿಪವಿಂ ಮಾಯಿಧ್ವಾಂತರವಿದ್ಯುತಿಂ"
ಹೀಗೆ ಪ್ರಾರ್ಥಿತರಾದ ಆಚಾರ್ಯರು ದುರ್ವಾದಿಗಳ ಗರ್ವವೆಂಬ ಪರ್ವತಕ್ಕೆ ವಜ್ರಾಯುಧಪ್ರಾಯವೂ, ಮಾಯಿಗಳೆಂಬ ಕತ್ತಲೆಗೆ ಸೂರ್ಯಪ್ರಕಾಶದಂತೆಯೂ ಇರುವ ಸಜ್ಜನರಿಗೆ ಅಮೃತದಂತಿರುವ ಅನುವ್ಯಾಖ್ಯಾನವನ್ನು ರಚಿಸಿದರು. ಈ ಅನುವ್ಯಾಖ್ಯಾನಕ್ಕೆ ಶ್ರೀ ಜಯತೀರ್ಥರು ರಚಿಸಿದ ವ್ಯಾಖ್ಯಾನವೇ "ಶ್ರೀಮನ್ನ್ಯಾಯ ಸುಧಾ" ಎಂದು ದ್ವೈತ ತತ್ವಶಾಸ್ತ್ರ ವಾಙ್ಮಯದಲ್ಲಿ ಸುಪ್ರಸಿದ್ಧವಾದ ಗ್ರಂಥ." ಶ್ರೀ ವ್ಯಾಸರಾಜರು ಶ್ರೀ ಜಯತೀರ್ಥ ಸ್ತೋತ್ರದಲ್ಲಿ :-
"ವ್ಯಾಸಸೂತ್ರಗಳೆಂಬೋ ಮಂದರವನು ವೇದ
ರಾಶಿಯೆಂಬೊ ವಾರಾಶಿಯೊಳಿಟ್ಟು
ಶ್ರೀಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರನ್ಯಾಯಸುಧೆ ಪಡೆದ ಯತೀಂದ್ರ"
ಎಂದು ಆನಂದಿಸಿದ್ದಾರೆ.
ಟೀಕಾಕೃತ್ಪಾದರ ಉಚ್ಚತರವಾದ ಶೈಲಿಯು ಅವರ ಅಗಾಧ ಪಾಂಡಿತ್ಯವನ್ನು, ಅಪರಿಮಿತವಾದ ಹರಿಗುರುಭಕ್ತಿಯನ್ನು, ನಿಸ್ಸೀಮವಾದ ವಿನಯವನ್ನು ಪ್ರತಿಬಿಂಬಿಸುತ್ತದೆ. ಅವರ ಶೈಲಿಯನ್ನು ಜ್ಞಾನಿಗಳೊಬ್ಬರು ಹೀಗೆ ವರ್ಣಿಸಿದ್ದಾರೆ.
ಚಿತ್ರೈಃ ಪದೈಶ್ಚ ಗಂಭೀರೈರ್ವಾಕ್ಯೈರ್ಮಾನೈರಖಂಡಿತೈಃ |
ಗುರುಭಾವಂ ವ್ಯಂಜಯಂತೀ ಭಾತಿ ಶ್ರೀ ಜಯತೀರ್ಥವಾಕ್ ||
ಮನೋಹರವಾದ ಪದಜೋಡಣೆ, ಗಂಭೀರವಾದ ವಾಕ್ಯ ರಚನೆ, ಪರರಿಂದ ಖಂಡಿಸಲಸಾಧ್ಯವಾದ ಪ್ರಮಾಣ ನಿರೂಪಣೆ, ಇವುಗಳಿಂದ ಕೂಡಿದ ಶ್ರೀ ಜಯತೀರ್ಥರ ಮಾತುಗಳು ಶ್ರೀ ಗುರುಮಧ್ವರ ಹೃದ್ಗತವನ್ನು ಅರುಹುತ್ತದೆ. ಆದ್ದರಿಂದಲೇ ಇವರು ಶ್ರೀ ಟೀಕಾಕೃತ್ಪಾದರೆಂದೇ ಜಗದ್ವಿಖ್ಯಾತರಾಗಿದ್ದಾರೆ. "ಸಕಲ ಶೃತಿಸ್ಮೃತಿತೀನಾಂ ತದುಪಕರಣಭೂತಬ್ರಹ್ಮಮೀಮಾಂಸಾಯಾಶ್ಚ" ಎಂಬ ಪದಗಳಿಂದ ಶೃತಿ ಸ್ಮೃತಿ ಇವುಗಳ ಅರ್ಥ ನಿರ್ಣಾಯಕವಾದುದೇ ಬ್ರಹ್ಮಮೀಮಾಂಸ ಎಂದಿದ್ದಾರೆ. ಹೀಗೆ ಶ್ರೀಪೂರ್ಣಬೋಧರ ಅನುಗ್ರಹಕ್ಕೆ ಸಂಪೂರ್ಣಪಾತ್ರರಾಗಿ ಅವರ ಅಭಿಪ್ರಾಯವನ್ನು ತಮ್ಮ ಪ್ರೌಢವೂ ಅರ್ಥಗರ್ಭಿತವೂ ಆದ ವ್ಯಾಖ್ಯಾನಗಳಿಂದ ಶ್ರೀ ಜಯತೀರ್ಥರು ಮಧ್ವಶಾಸ್ತ್ರದ ಅಧ್ಯಯನ ಸಂಪನ್ನರಿಗೆ ಮಹದುಪಕಾರ ಮಾಡಿರುತ್ತಾರೆ. ಇಂಥಹ ಮಹಾತ್ಮರ ನಾಮಸ್ಮರಣೆಯೇ ದುರಿತಹರ. ಕ್ರಿ||ಶ||1388 ರಲ್ಲಿ ವೃಂದಾವನ ಪ್ರವೇಶ ಮಾಡಿದರು. ಇವರ ಮೂಲಬೃಂದಾವನ ಗುಲ್ಬರ್ಗಾ ಜಿಲ್ಲೆಯ ಮಳಖೇಡದಲ್ಲಿದೆ.
"ಜ" ಎನ್ನಲು ಜಯಶೀಲನಾಗುವ
"ಯ" ಎನ್ನಲು ಯಮನಂಜುವ
"ತೀ" ಎನ್ನಲು ತಿಮಿರಪಾತಕನಾಶ
"ರ್ಥ" ಎನ್ನಲು ತಾಪತ್ರಯ ಶಮನ
ಎಂದು, ಟೀಕಾಚಾರ್ಯರ ಪದಧೂಳಿಯ ಕಣವು ತಾಕಿದ ಮನುಷ್ಯನೇ ಧನ್ಯನೆಂದು ಶ್ರೀ ವಿಜಯದಾಸವರೇಣ್ಯರು ವರ್ಣಿಸಿದ್ದಾರೆ. ನಾಕರಾಜರಾದ ಶ್ರೀಜಯತೀರ್ಥ ತಮ್ಮದೇ ಆದ ವಜ್ರಾಯುಧದಿಂದ ಪಾಪಪರ್ವತವನ್ನು ನಾಶಗೊಳಿಸಿ ನಮ್ಮನ್ನು ಪುನೀತರನ್ನಾಗಿ ಮಾಡಲಿ!!
||ಶ್ರೀ.ಗು.ಮ.ಮ||