||ಶ್ರೀ||
||ಶ್ರೀ ವಿಠಲಕೃಷ್ಣೋ ವಿಜಯತೇ||
||ಶ್ರೀ ಯಾಜ್ಞವಲ್ಕ್ಯೋ ವಿಜಯತೇ||
ವೇದಾಂತವೇದ್ಯಂ ಸಕಲಾಗಮಜ್ಞಂ ದಯಾಸಿಂಧು ಮನಂತ ರೂಪಂ|
ಶ್ರೀ ಯಾಜ್ಞವಲ್ಕ್ಯ ಪರಿಪೂರ್ಣಚಂದ್ರಂ ಶ್ರೀ ಮದ್ಗುರುಂ ನಿತ್ಯಮಹಂ ನಮಾಮಿ||
ಮಾಧವಾರ್ಯಾಯ ಗುರುವೇ ನಮೋ ವೈರಾಗ್ಯಶಾಲಿನೇ||"
ದ್ವೈತಮತ ಸಿದ್ಧಾಂತದ ಪುನರುಜ್ಜೀವನದ ಇತಿಹಾಸದಲ್ಲಿ ತಮ್ಮ ಅಗಾಧವಾದ ಪಾಂಡಿತ್ಯದಿಂದಲೂ, ಉಜ್ವಲವಾದ ತ್ಯಾಗದಿಂದಲೂ ಧರ್ಮ ಸಂಸ್ಥಾಪನೆಯ ಕಾರ್ಯಕ್ಕೋಸ್ಕರ ಈ ಉಭಯಧರ್ಮವೀರರು, ದ್ವೈತಮತ ಸಾಮ್ರಾಜ್ಯದ ಚಕ್ರವರ್ತಿಗಳು ಎನಿಸಿದ "ಶ್ರೀ ಮಾಧವತೀರ್ಥರು."
ಕಣ್ವಮಠದಲ್ಲಿ ದ್ವೈತಮತ ಸಿದ್ಧಾಂತದ ಸ್ಥಾಪನಾಚಾರ್ಯರಾದ ಶ್ರೀ ಮಾಧವತೀರ್ಥ ಯತಿವರ್ಯರಲ್ಲಿ ಅಗಾಧವಾದ ಪಾಂಡಿತ್ಯವಿತ್ತು. ತತ್ವನಿಷ್ಠೆ, ಪ್ರತಿಭಾಸಂಪನ್ನರಾದ ಇವರ ಪೂರ್ವಾಶ್ರಮದ ನಾಮಧೇಯ ಸುರಪುರದ ಶ್ರೀ ವೆಂಕಟೇಶಾಚಾರ್ಯರೆಂಬುದಾಗಿತ್ತು. ಶ್ರೀ ಮದಾನಂದತೀರ್ಥರಿಂದ ಪರಮಹಂಸಪೀಠದ ಪದವಿಯನ್ನು ಪಡೆದ ಉಡುಪಿಯ ಶ್ರೀ ಶಿರೂರಮಠದ ಶ್ರೀ ಲಕ್ಷ್ಮೀಮನೋಹರತೀರ್ಥರಿಗೆ ಆದ ಸ್ವಪ್ನದೃಷ್ಟಾಂತದಂತೆ ಶ್ರೀ ವಾಯುದೇವರು ಪ್ರಸಾರ ಮಾಡಿದ ತತ್ವಗಳನ್ನು ಪ್ರಚಾರ ಮಾಡುವದಕ್ಕೆ ಸಮರ್ಥರಾಗಿರುವ, ಆದಿಶೇಷನ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀವೆಂಕಣ್ಣಾಚಾರ್ಯರಿಗೆ ಸನ್ಯಾಸಾಶ್ರಮವನ್ನು ನೀಡುವದಾಗಿ ನಿಶ್ಚಯಿಸಿದರು. ಆದಿಶೇಷನು ಸ್ವಪ್ನದಲ್ಲಿ ವಾಯ್ವಂಶ ಸಂಭೂತರಾದ ಮಹಾತಪಸ್ವಿಗಳಿಂದ ನಿನಗೆ ವಾಯುದೇವರು ಪ್ರಸಾರ ಮಾಡಿದ ವಿಷ್ಣುಸರ್ವೋತ್ತಮತ್ವದ ಪ್ರಸಾರ ಕಾರ್ಯವನ್ನು ವಹಿಸಿಕೊಡುವದನ್ನು ಯಶಸ್ವಿಯಾಗಿ ನಡೆಸಲು ಆಜ್ಞಾಪಿಸಿದ ಅನುಸಾರವಾಗಿ "ಶ್ರೀಹರಿ ಇಚ್ಛೆ" ಎಂದು ಸುರಪುರದ ಎಳಮೇಲಿ ಆಚಾರ್ಯರು ಎಂಬ ಪ್ರಮುಖ ಮಹನೀಯ ಪರಿವಾರದೊಂದಿಗೆ ಸಂತೋಷದಿಂದ ಸನ್ಯಾಸದೀಕ್ಷೆಯನ್ನು ಸ್ವೀಕರಿಸಲು ಮುಂದಾದರು.
ಉಡುಪಿ ಕ್ಷೇತ್ರದಲ್ಲಿ ಶ್ರೀ ಲಕ್ಷ್ಮೀಮನೋಹರತೀರ್ಥರು ಶ್ರೀ ವಿಠಲಕೃಷ್ಣದೇವರ ಪ್ರೇರಣೆಯಂತೆ ಪರಮಹಂಸಪೀಠದ ಪದವಿಯನ್ನು ಪ್ರದಾನ ಮಾಡಿ, ಶಾ.ಶ. 1718 ಕ್ರಿ.ಶ.1796 ನಳನಾಮ ಸಂವತ್ಸರ ಮಾಘ ಶುದ್ಧ ಪಂಚಮಿಯಂದು "ಶ್ರೀ ಮಾಧವತೀರ್ಥ" ರೆಂದು ಅಂಕಿತಪ್ರದಾನ ಮಾಡಿದರು. ಶ್ರೀ ಮದಾನಂದತೀರ್ಥ ಕರಾರ್ಚಿತವಾದ ಶ್ರೀ ತಾಂಡವವಿಠಲಕೃಷ್ಣನ ಮೂರ್ತಿಯನ್ನು, ಅಲಂಕಾರಾರ್ಥವಾಗಿ ರುಕ್ಮಿಣಿಸತ್ಯಭಾಮಾ ಸಹಿತ ಶ್ರೀ ವೇಣುಗೋಪಾಲಕೃಷ್ಣನ ಪ್ರತಿಮೆಯನ್ನಿತ್ತರು. ಶ್ರೀ ವಿಷ್ಣುಲಾಂಛನಗಳಾದ ಶ್ರೀಮುದ್ರೆಯನ್ನು ಕೊಟ್ಟು, ಮುದ್ರಾಧಿಕಾರವನ್ನು ಕೊಟ್ಟು ಬಲಮುರಿ ಶಂಖ ಇವುಗಳೆಲ್ಲವನ್ನು ದಯಪಾಲಿಸಿ ಅನುಗ್ರಹಿಸಿದರು.
ನೀವಿನ್ನು ಶ್ರೀ ವಿಠಲಕೃಷ್ಣನ ಸೇವಾನಿರತರಾಗಿ ಶ್ರೀಹರಿಯ ಪೂರ್ಣಕೃಪೆಗೆ ಪಾತ್ರರಾಗಿರಿ. ಕಣ್ವ ಸಾಮ್ರಾಜ್ಯದ ಚಕ್ರವರ್ತಿಗಳು ಎಂದು, ಕಣ್ವಮಠಪರಂಪರೆಯು ಅತ್ಯಂತ ಪ್ರಖ್ಯಾತಿ ಹೊಂದಲಿ ಎಂದು ಮಾಧವತೀರ್ಥರನ್ನು ವಿಶೇಷವಾಗಿ ಆಶೀರ್ವದಿಸಿದರು. ಹೀಗೆ ಉಡುಪಿಯ ಶಿರೂರಮಠದ 23ನೇಯ ಶ್ರೀಪಾದಂಗಳವರಾದ ಶ್ರೀಲಕ್ಷ್ಮೀಮನೋಹರ ತೀರ್ಥರಿಂದ ಯತ್ಯಾಶ್ರಮವನ್ನು ಪಡೆದು(ಸ್ವೀಕರಿಸಿ) ಕಾಣ್ವಶಾಖೆಯ ಮಾಧ್ವಮಠವನ್ನು ಸ್ಥಾಪಿಸಿ, ಶಿಷ್ಯೋದ್ಧಾರ ಮಾಡುತ್ತ, ಶ್ರೀವಿಠಲಕೃಷ್ಣದೇವರ ಸಂದರ್ಶನಾದಿಗಳನ್ನು ಮಾಡಿಸುವದಾಗಿ ಶ್ರೀ ಯಾಜ್ಞವಲ್ಕ್ಯರ ಸಂದೇಶದಂತೆ ಶುಭಸಂಪ್ರದಾಯಗಳನ್ನು ಕಾಯ್ದುಕೊಂಡು ಶಿರೂರು ಮಠದಿಂದ ಶ್ರೀ ವಿಠಲಕೃಷ್ಣನ ಅನುಗ್ರಹದೊಂದಿಗೆ ಬರುವಾಗ ಮಾರ್ಗ ಮಧ್ಯೆ ಧರ್ಮದ್ರೋಹಿಗಳು ಶ್ರೀಗಳು ಕೈಗೊಂಡ ಕಾರ್ಯ ನೆರವೇರದಂತೆ ಅನೇಕ ರೀತಿಯ ವಿಘ್ನಗಳನ್ನು ವಡ್ಡಿದಾಗ "ಶ್ರೇಯೋಬಹುವಿಘ್ನಾನಿ" ಎನ್ನುವಂತೆ ಗುರುಗಳು ಸ್ವಾಮಿನಿಷ್ಠೆ, ಆತ್ಮಸ್ಥೈರ್ಯದಿಂದ ತಮ್ಮ ಯೋಗದೃಷ್ಟಿಯಿಂದ ಕೃಷ್ಣಾ ನದಿಯ ಮೇಲೆ ಶ್ಯಾಠಿಯನ್ನು ಹಾಸಿಕೊಂಡು ಗುರುಗಳು ಕರುಣಿಸಿದ ಉಪಾಸನಾ ಮೂರ್ತಿಯನ್ನು ತೆಗೆದುಕೊಂಡು ನದಿಯನ್ನು ದಾಟಿ ಈಗಿನ ತಿಂಥಿಣಿ ದಂಡೆಯಿಂದ ತಪೋಬಲದಿಂದ ವೀರಘಟ್ಟಸಂಸ್ಥಾನಕ್ಕೆ ತಲುಪಿದರು.
ಮತ್ತೆ ಕೃಷ್ಣಾತೀರದ ಚಿತ್ತಾಪುರ ತಾ||ಲಿಂಗಸ್ಗೂರು ಜಿ|| ರಾಯಚೂರು [ಈಗ ಮುಳುಗಡೆಯಾಗಿರುವ ಪ್ರದೇಶ] ಚಿತ್ತಾಪುರ ಜಾಹಗೀರದಾರ ವಂಶಸ್ಥರಾದ ಶ್ರೀ ಶ್ರೀ ಶ್ರೀ ಸತ್ಯಪರಾಕ್ರಮತೀರ್ಥರ ಧಾರ್ಮಿಕ ಸ್ನೇಹದೊಂದಿಗೆ ಚಿತ್ತಾಪುರದಲ್ಲಿ ಕೆಲಕಾಲನೆಲೆಸಿ, "ಮಧ್ವಶಾಸ್ತ್ರ" ಪ್ರಸಿದ್ಧ ಪ್ರಚಾರಕ್ಕಾಗಿ ತೀರ್ಥಕ್ಷೇತ್ರಗಳ ಯಾತ್ರೆಗಾಗಿ ಉತ್ತರ ದಿಗ್ವಿಜಯ ಮಾಡಿದರು. ಕಣ್ವಮಠದ ಕೀರ್ತಿಪತಾಕೆಯನ್ನು ಶ್ರೀಮಾಧವತೀರ್ಥರು ಮುಗಿಲೆತ್ತರಕ್ಕೆ ಹಾರಿಸಿದರು.
ಶ್ರೀಹರಿಯ ಆಜ್ಞಾನುಸಾರವಾಗಿ ಜ್ಞಾನ, ಭಕ್ತಿ, ವಿರಕ್ತಿ ವಿಷ್ಣು ಸರ್ವೋತ್ತಮತ್ವವನ್ನು ಪ್ರತಿಪಾದಿಸುತ್ತ ಭಾಗವತ ಸಂಪ್ರದಾಯವನ್ನ ಹಾಗೂ ಮಧ್ವ ಸಿದ್ಧಾಂತದ ರಹಸ್ಯತತ್ವಾದಿಗಳ ಸಸ್ಯಪೋಷಕರಾಗಿ ಅಭಿವೃದ್ಧಿಗೊಳಿಸಿ ಮಹಾವೃಕ್ಷವನ್ನಾಗಿ ಬೆಳೆಸಿದರು. ಗುರುಗಳ ಕೃಪೆ ಜನರಲ್ಲಿ ಅಪಾರವಾಗಿ ಬೆಳೆಯಿತು. ಮತ್ತು ಪರಮಾತ್ಮನ ವಿಷಯದಲ್ಲಿ ಅಗಾಧವಾದ ಭಕ್ತಿ ಉದ್ರೇಕವಾಯಿತು."ಮಧ್ವಶಾಸ್ತ್ರ" ಪ್ರಸಿದ್ಧ ಪದ್ಧತಿಗಳ ಸಿದ್ಧಿ ಪಡೆದು ಪರಿಶುದ್ಧನೆನಿಸಿಕೊಂಡ ಯತಿರಾಜ" ಎಂದಿದ್ದಾರೆ ಶ್ರೀರಾಮಾಂಕಿತರಾದ ಶ್ರೀರಾಮದಾಸರು.
ನಂತರದಲ್ಲಿ ಪುನಃ ಶ್ರೀ ರಾ.ರಾ.ಶೇಷಗಿರಿರಾವ ಪತ್ನಿ ಶ್ರೀಮತಿ ಜೀವೂಬಾಯಿ ಎಂಬ ಕುಟುಂಬದವರ ಆಪೇಕ್ಷೆ ಮೇರೆಗೆ ಶ್ರೀ ಮಾಧವತೀರ್ಥರು ಗೌರವದಿಂದ ಆನಹೊಸೂರು ಗ್ರಾಮಕ್ಕೆ ತಮ್ಮ ಆರಾಧ್ಯದೈವ ಶ್ರೀವಿಠಲಕೃಷ್ಣನ ವಿಗ್ರಹದೊಂದಿಗೆ ವಿಜೃಂಭಣೆಯಿಂದ ಪ್ರವೇಶ ಮಾಡಿ ಕುಲಕರ್ಣಿ ಕುಟುಂಬದವರಿಗೆಲ್ಲ ಆಶೀರ್ವದಿಸಿದರು. ಮುಂದಿನ ಪ್ರವಾಸಾವಧಿ ಎಲ್ಲಿಗೆಂದು ಗ್ರಹಸ್ಥರು ವಿಚಾರಿಸಿದಾಗ, ಅವರ ಮನೆತನಕ್ಕೆ ಲಿಂಗಸೂರು ತಾಲೂಕಿನ ಗೋನವಾರ ಗ್ರಾಮದಲ್ಲಿರುವಂಥ ಭೂಮಿಯನ್ನು ಜೀವೂಬಾಯಿಯವರ ಅಖಂಡಸೇವೆಯ ಪ್ರಯುಕ್ತ ಆಶೀರ್ವಾದರೂಪಕವಾಗಿ "ಹರಿಯಲಾರದ ಉಡುಗೊರೆ" ಎಂದು ಜಮೀನನ್ನು ಕೊಟ್ಟು ಆಶೀರ್ವದಿಸಿ ನಂತರದಲ್ಲಿ ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಬದ್ಧಿನ್ನಿ ಗ್ರಾಮಕ್ಕೆ ಬಂದು ಶಾ.ಶ 1732(ಕ್ರಿ.ಶ 1810) ಶುಕ್ಲನಾಮ ಸಂವತ್ಸರ ಚೈತ್ರ ಶುದ್ಧ ಚತುರ್ಥಿಯ ದಿನದಂದು ರತ್ನ ಖಚಿತ ಕಾಂತಿಯಿಂದ ಕಂಗೊಳಿಸುವ ಸುಂದರ ಶ್ರೇಷ್ಠವಾದ ವಜ್ರಶಿಲಾ ಬೃಂದಾವನದಲ್ಲಿ ಶ್ರೀವಿಠಲಕೃಷ್ಣ ಪದಾರವಿಂದ ಮಕರಂದ ಮಧುಪರಾದರು.
ಇಂಥಹ ಮಧ್ವಸೇವಾ ಮಹಾಫಲಸಂಸಿದ್ಧಿಯನ್ನು ಪಡೆದ ಈ ಜ್ಞಾನಿವರೇಣ್ಯರ ನಾಮಸ್ಮರಣೆಯೇ ದುರಿತಹರ. ಇವರ ಪಾವನ ಚರಿತಾಮೃತ ಗಂಗೆಯಲ್ಲಿ ಮಿಂದು ಪೂತಾತ್ಮರಾಗಲೆಂದೇ ಶ್ರೀಬುದ್ಧಿನ್ನಿ ಪುಣ್ಯಕ್ಷೇತ್ರದಲ್ಲಿ ಈ ಅಮರ ಹೊನಲನ್ನು ಹರಿಯಿಸಿ, ಜಾಹ್ನವಿಯನ್ನು ಭೂಮಿಯ ಜನರಿಗಿತ್ತ ಜಹ್ನು ಋಷಿಯಂತೆ ಕೃತಾರ್ಥರಾಗಿದ್ದಾರೆ. ನಮ್ಮೀ ಕಣ್ವ ಸಮಾಜದ ಧರ್ಮಚಕ್ರವರ್ತಿಗಳಾದ "ಶೇಷಾಂಶರಾದ ಶ್ರೀಶ್ರೀಶ್ರೀ ಮಾಧವತೀರ್ಥರು."

ನಂತರದಲ್ಲಿ ಆನಹೊಸೂರಿನ ಶ್ರೀ ಶೇಷಗಿರಿರಾವ್ ಪತ್ನಿ ಕು||ಸೌ||ಜೀವೂಬಾಯಿಯವರು ಮನಸಾ ವಿಚಾರಿಸಿ ಶ್ರೀಗಳು ಆಶೀರ್ವಾದ ರೂಪಕವಾಗಿ ಕರುಣಿಸಿದ ಭೂಮಿಯನ್ನು ತಮ್ಮ ಕುಲಪುರೋಹಿತರಾದ ಗೋನವಾರದ ಜ್ಯೋತಿರ್ವಿದ್ವಾನ್ ಶ್ರೀ ವೇದಮೂರ್ತಿ ಜನ್ನಪ್ಪಾಚಾರ್ಯ ಪತ್ನಿ ಕು||ಸೌ||ವೆಂಕುಬಾಯಿಯವರ ದ್ವಾರಾ ಪರಮಗುರುಗಳಾದ ಶ್ರೀ ಮಾಧವತೀರ್ಥರ ಸೇವೆ ನಡೆಯಲೆಂದು ಗೋನವಾರದ ಪುರೋಹಿತರ ಮನೆಗೆ ಧಾರೆ ಎರೆದ ಪ್ರಯುಕ್ತ ಚೈತ್ರ ಶುದ್ಧ ಚತುರ್ಥಿ ಕಾರ್ಯಕ್ರಮ ಆನಹೊಸೂರು ಕುಲಕರ್ಣಿ ಮತ್ತು ಗೋನವಾರದ ಪುರೋಹಿತ ವಂಶಸ್ಥರಿಂದ ಅಂದಿನಿಂದ ಇಂದಿನವರೆಗೆ ಅಲಂಕಾರ ಸೇವೆ ಶ್ರೀ ಶ್ರೀ ಶ್ರೀ ಮಾಧವತೀರ್ಥರಿಂದ ಪ್ರಸ್ತುತದಲ್ಲಿರುವ ಶ್ರೀ ಶ್ರೀ ಶ್ರೀ 1008 ನೇ ವಿದ್ಯಾವಾರಿಧಿತೀರ್ಥಂಗಳವರ ತನಕ ಪ್ರತಿವರ್ಷ ತಪ್ಪದೆ ನಿರಂತರವಾಗಿ ಸೇವೆ ನಡೆಯುತ್ತಿದೆ.
ಶ್ರೀ ವಿಠಲಕೃಷ್ಣನ ಅರ್ಚನೆ ಮತ್ತು ಯತಿಗಳ ಆರಾಧನೆ ಹಾಗೂ ರಥೋತ್ಸವ, ಭಕ್ತಾದಿಗಳ ವಿವಾಹ, ಉಪನಯನ, ಜವಳ ಹಾಗೂ ಇನ್ನಿತರ ಮಂಗಲಕಾರ್ಯ ನಡೆಯುತ್ತವೆ. ರಥೋತ್ಸವ ದಾನಿಗಳಾದ ಮನವಿ ತಾಲೂಕಿನ ಹಾಲಾಪುರ ಗ್ರಾಮದವರಾದ ಶ್ರೀ ಯೋಗಿಂದ್ರರಾವ ಪತ್ನಿ ಕು||ಸೌ||ಲಕ್ಷ್ಮೀ ಇವರು ಶ್ರೀ ಗುರುಗಳಿಗೆ ರಥವನ್ನು ಅರ್ಪಣೆ ಮಾಡಿದ ಅವರ ವಂಶಸ್ಥರಿಂದ ಪ್ರತಿವರ್ಷ ಬಿಡದಂತೆ ರಥೋತ್ಸವ, ರಥಾಂಗ ಹೋಮ ಅವರಿಂದ ನೆರವೇರುತ್ತದೆ.
ಶ್ರೀ ಮಾಧವತೀರ್ಥರು ಮಹನೀಯರು, ಮಹಾವಿಭೂತಿಗಳೂ, ಮಹಿಮಾಸಂಪನ್ನರು. ಕರುಣಾಶಾಲಿಗಳು ಎಂಬುದಕ್ಕೆ ಪ್ರತ್ಯಕ್ಷಸಾಕ್ಷಿಯಾಗಿದೆ. ಬುದ್ಧಿನ್ನಿ ಕ್ಷೇತ್ರದಲ್ಲಿ ನೆಲೆಸಿದ "ಶ್ರೀ ಮಾಧವತೀರ್ಥ ಸ್ವಾಮಿಗಳವರು." ಅನನ್ಯಭಾವದಿಂದ ಭಜಿಸುವ ಭಕ್ತರ ಸೇವೆಗಳನ್ನು ಸೇವಿಸುತ್ತ ಅವರ ಇಷ್ಟಾರ್ಥಗಳನ್ನು ಸಲ್ಲಿಸುತ್ತ ನಿತ್ಯನೂತನರಾಗಿ ಅಗಮ್ಯ ಮಹಿಮರೂ, ಭಕ್ತವತ್ಸಲರೂ ಆದ ಗುರುಗಳನ್ನು ಸ್ಮರಿಸಿ, ಭಜಿಸಿ ಅವರ ಅನುಗ್ರಹಕ್ಕೆ ಪಾತ್ರರಾಗುವುದು ನಮ್ಮಗಳ ಆದ್ಯ ಕರ್ತವ್ಯವು.
||ಶ್ರೀ ವಿಷ್ಣುಪ್ರಿಯ ವಿಷ್ಣುಪ್ರೀತ್ಯರ್ಥಂ ಶ್ರೀ ಕೃಷ್ಣಾರ್ಪಣಮಸ್ತು||
- ಡಾ.ಸುಮಾ ಸಂಜೀವ ಕೆ